Sunday, 10 February 2013

ಏಳಿಗೆ

ಉಳುವ ನೆಲವ ಮಾರಿ

ಜೋಪಡಿಯ ಬಿಟ್ಟು

ಕಲ್ಲು ಕಟ್ಟಡವ ಕಟ್ಟಿ

ಕಾಲು ದಾರಿಯ ಅಳಿಸಿ

ನುಣ್ಣನೆಯ ದಾರಿಯ ಬೆಳೆಸಿ

ವಿಷ ಗಾಳಿಯ ಕುಡಿದು

ಅನ್ನಕ್ಕಾಗಿ ಅಲೆಯುವ

ನಾವು

ಅಭಿವೃದ್ಧಿಹೊಂದಿದವರು

Sunday, 5 August 2012

ಓ ದೊರೆಯೆ

ಅಜ್ಜ ಇಟ್ಟ ರಾಗಿಯ 

ಭೂ ತಾಯಿಗೆ ಉಣಿಸಿ

ಜಟ್ಟಿಯಾಗಿದ್ದೇನೆ

ನೀನು ಕೊಡುವ ಕಾಳು ಕಡ್ಡಿಯ 

ಬೆಳೆದು 

ಶರಣಾಗಲಾರೆ

ಅದ ತಿಂದು 

ನಾ 

                                                 ನಪು:ಸಕನಾಗಲಾರೆ

Monday, 2 January 2012

ದಕ್ಕೆಯಾದ ಭಾವನೆಗಳಿಗೆ

ದಕ್ಕಲಿ

ಸುಮಧುರ ದಿನಗಳು

ಕಳಚದಿರಲಿ ಬಾಂಧವ್ಯದ ಬೆಸುಗೆಗಳು

ನವ ಚೈತನ್ಯ ತುಂಬುವ 

ಹೊಸ ವರ್ಷದ ಸಂಭ್ರಮ

ಹರುಷವ ತರಲಿ

ವರುಷವೆಲ್ಲ ಇರಲಿ

Thursday, 17 November 2011

ಯುದ್ದ ಎಂದರೆ 

ನಾವು 

ಹಿಗ್ಗಿವುದು ಅಲ್ಲ

ಕುಗ್ಗುವುದು ಅಲ್ಲ

ಸ್ಥೈರ್ಯ ಹೆಚ್ಚಿಸಿಕೊಳ್ಳುವುದು 

ಅಲ್ಲ 

ಅಂಧಕಾರದಲ್ಲಿ ಭುಗಿಲೆದ್ದ 

ಕ್ರೌರ್ಯ

Thursday, 17 March 2011

ಬೆಳ್ಳಿ ಬಂಗಾರ

ಆಗೊಂದು ಹೀಗೊಂದು ರೂಪ

ಕುಲುಮೆಯಲಿ

ಅಕ್ಕಸಾಲಿಗ ಉಳ್ಳವರಿಗೆ


ಮಡಿಕೆ ಕುಡಿಕೆಯ ಗಡಿಗೆ

ಸುಟ್ಟರೂ ಗುರಿಯೊಂದು

ತಣ್ಣಗಿರುವುದು

ಕುಂಬಾರ ದಣಿದ ದನಿಕನಿಗೆ
 
 

Saturday, 18 December 2010

ಉರಿ ಬಿಸಲಲಿ 


ಸುಡು ಕೆಂಡವ ಹೆಕ್ಕಿ


ಒಡಲ ಮಡಿಲಿಗೆ ತುಂಬಿಕೊಂಡು


ಭುವಿಯ ಧಗೆ ಸಣ್ಣದಾಗಿಸಲು 


ನಾನು ಪಾತ್ರದಾರಿಯಾಗಿರುವೆ.

Friday, 24 September 2010

ಇಳೆಗೆ ಚಿಗುರು

ಮಲ್ಲಿಗೆಯ ಬಳ್ಳಿಯ ತವಕ

ರಂಬೆ ಕೊಂಬೆಗಳನು ಸುತ್ತಿ 

ಕಣ್ತೆರೆದು

ಅಣಕಿಸುವ ಬೆಳಕಿಗೆ ಬೆಳಕನು 

ಆಸರೆಗೆ ತಂಪನು ನೀಡುತ

ಮುಡಿಯನೇರಿ ಸೂಸಿ

ತಾ ಪಡೆದ ಕ್ಷಣದ ಸುಖದಿ

ಕೆಚ್ಚಲ ಹಾಲು ತುಂಬಿ 

ಕರುಳ ಬಳ್ಳಿಯು 

ಹೊರ ಬರಲು ತವಕಿಸುತ್ತಿದೆ

Friday, 17 September 2010

ರಕ್ಕೆ ಹೂವು-ನಗೆ ಬುಗ್ಗೆ

ರಕ್ಕೆ ಹೂವು
ನನ್ನವಳ ಸೆಳೆತಕೆ ಸಿಕ್ಕಾಗ

ನನ್ನುಸಿರ ಬಸಿದು ನೀರೆರದೆ

ತನು ತುಂಬಿ ಅರಳಿ 

ದುಂಬಿಯ ಸೆಳತಕೆ ಮರುಳಾಗಿ 

ಹಾರಿಹೋದಳು 






ನಗೆ ಬುಗ್ಗೆ

ಕಲ್ಪನೆಗೂ ಸಿಗದೆ 

ಮರೆಯಾಗುತ್ತಿದ್ದ ತೊರೆಯು 

ನಿನ್ನ ನಗುವಿಗೆ 

ದುಮ್ಮುಕ್ಕಿ ಹರಿಯಿತು.

Monday, 13 September 2010

ಬುಡಬುಡಕೆ

ಶಕುನದ ಹಕ್ಕಿಯ

ಸೂಚನೆಯ

ಇಡಿ ರಾತ್ರಿ ಊರ ಸುತ್ತಿ

ಸಾರಿ ಜಾಬು ಕಟ್ಟಿದವನು 

ಮುಂಜಾನೆ 

ಮನೆ ಮನೆಯ ಅಲೆದು

ಜೋಳಿಗೆಯ ತುಂಬಿಸಿ 

ಬಾಗಿಲ ಬಳಿ ನಿಂತಾಗ 

ಸೂತಕದ ಛಾಯೆಯ ಕಂಡು 

ಬುಡ ಬುಡಕೆಯ 

ನಾಳವು ಸೂಚನೆಯ ನೀಡಲು 

ನಡುಗಿತು

Saturday, 4 September 2010

ನಿಶಬ್ಧ ಬೆಳಕು

ನನ್ನ ಒಲವನು 

ಒಡೆದ ಮಡಿಕೆ ಎಂದರು.

ನೆರೆ ಮನೆಯಲಿ 

ಮೊಟ್ಟೆ ಇಟ್ಟ ಹಕ್ಕಿ ಎಂದರು.

ಹಣ್ಣಿಲ್ಲದ ಮರದಂತೆ 

ನೀ.. ಬಂಜೆ ಎಂದರೂ...

ನೆರಳಿನ 

ಮಧುರ ಪ್ರೀತಿ 

ಮರೆಯಾಗುವುದೆ ?

Saturday, 28 August 2010

ಭುವಿಯ ಒಡಲ ಕೂಗು

ಜಗವೆಲ್ಲ ತುಂಬಿಹುವುದು

ನಡೆಸುವ ನಾವಿಕನಿಲ್ಲ

ಓಡುತಿವುದು ಬಂಡಿ 

ಚಿದ್ರಗೊಂಡ ರಭಸಕೆ.

ನೀ ಕರುಣಿಸಿದ ಜನರೆ

ಅಗೆ ಅಗೆದು 

ಬಗೆ ಬಗೆದು

ನಿನ್ನೊಡಲ ಕಣ ಕಣವನು 

ಕಿತ್ತು ತಿನ್ನುತಿಹರು

ನಿಂತು ಬಿಡು ಒಮ್ಮೆ

ನಶಿಸಿ ಹೋಗಲಿ ಮನುಕುಲವೆಲ್ಲ

ಅಲ್ಲಿ, 
ಕಾಡು ಮೇಡುಗಳು ಉಗಮಿಸಲಿ 

ದಾರಿ ದಾರಿಯೆ ಕಣ್ಮರೆಯಾಗಲಿ

ಅವನಳಿಸಿದ ಪ್ರಾಣಿ ಪಕ್ಷಿ ಸಂಕುಲಗಳೆಲ್ಲ 

ಮರು ಹುಟ್ಟಿ ಸಂಭ್ರಮಿಸಲಿ.

Tuesday, 17 August 2010

ಮಮತೆಯ ಮರೆತವರು

ಈ ಭೂಮಿಯು ಹೆಣ್ಣು 

ಈ ಜಲವು ಹೆಣ್ಣು 

ನೀನೂ ಹೆಣ್ಣು, 

ನಿನ್ನ ಕುಡಿಯು ಹೆಣ್ಣೆಂದು 

ಎದೆಯ ಹಾಲಲಿ 

ಕತ್ತಿ ಮಸೆಯುತ್ತಿರುವೆ

ಇದು ಹೆಣ್ಣಿನ ಭಲಾಢ್ಯದ 

ಸಂಕೇತವೋ

ಗಂಡಿನ ವ್ಯವಸ್ಥಿತ ಪಿತೂರಿಯೆ ?

Saturday, 7 August 2010

ದುಗುಡದ ಮನ

ಜೋಡಿ ಎತ್ತುಗಳು 
ದುರುಗುಟ್ಟಿ ನೋಡುತಿವೆ
ನಾ ಹೇಗೆ ತಿಳಿಯಲಿ 
ಅವು ನನ್ನ ತಿವಿಯುವುದಿಲ್ಲವೆಂದು ?


ಜೋಡಿ ಹಕ್ಕಿಗಳೆರಡು
ಗೂಡು ಬಿಟ್ಟು ಹಾರುತಿವೆ 
ನಾ ಹೇಗೆ ತಿಳಿಯಲಿ 
ಅವು ಮತ್ತೆ ಗೂಡು ಸೇರುತ್ತೇವೆಂದು ? 



ಕಾಣದ ಕೈಗಳೆರಡು
ಕತ್ತು ಹಿಸುಕುತ್ತಿವೆ 
ನಾ ಹೇಗೆ ತಿಳಿಯಲಿ 
ನಾ ಮತ್ತೆ ಬದುಕುತ್ತೇನೆಂದು ? 

ದುಗುಡದ ಮನವೆ ದೂರವಾಗು ನನ್ನಿಂದ 
ದೃಡನಾಗುವೆ ನಾ ಮಸಣದಲ್ಲೂ............

Saturday, 31 July 2010

ಕೆಂಪು ಕುಂಚ

ನಿನ್ನ ದ್ಯೇಯಗಳ ನಿರ್ಣಯ

ಪರರ ಏಳಿಗೆಗೆ ಮೀಸಲಿರಿಸಿದೆ.

ಸರ್ವಧರ್ಮ

ಸಮಾಭಾವವೆಂದು ತಿಳಿದು

ನ್ಯಾಯ ವಿಚಾರ,

ಅಭಿವ್ಯಕ್ತಿ ನಂಬಿಕೆ ಇಟ್ಟು

ಊಟ, ಉಡುಪು, ಆಚಾರ,

ಭಾಷೆಗಳನ್ನು ಮೈಗೂಡಿಸಿಕೊಂಡು

ದೇಶವನು ಸುಭದ್ರಗೊಳಿಸಲೊರಡುವ

ಸಮಯಕೆ

ದೊರೆಯ ದಬ್ಬಾಳಿಕೆಗೆ ಸಿಲುಕಿ ಸೊರಗಿದೆ

ಹಸಿದು ಒಣಗಿದ ಜನರು ಕಾಯುತಿಹರು

ಏಳು, ಎದ್ದೇಳು

ನಿನ್ನ ಲೇಖನಿಯಲಿ ಶಿರವ ಚಂಡಾದಿ

ಹೋರಾಟದ ಹಾದಿಗೆ ಮುನ್ನುಡಿಯಿಡು.

Saturday, 24 July 2010

ತಣಿಸು ಜೀವಾತ್ಮವ


ಒಡಕು 
ಸನಿಹವಾದಾಗ 
ಮಾತು 
ಹೊರಹೊಮ್ಮಿ 
ಮನ್ನಿಸು ಎನ್ನುವಷ್ಟರಲ್ಲಿ 
ನನಗಾದ ನೋವು 
ನಿನ್ನದಲ್ಲವೆನ್ನುತ 
ಮರು ಮಾತಾಡದೆ 
ಬಾನಾಡಿಗಳ ದಣಿವಿನ ದಾಹವ ತೀರಿಸಿ 
ಮರೆಯಾದಳು

Saturday, 17 July 2010

ಪಟ್ಟ ಭದ್ರ

ಕುಂಟು ನೆಪದ ಮಿಡತೆ 

ಅಧಿಕಾರದ ಚುಕ್ಕಾಣಿ ಹಿಡಿದಾಗ

ಜೊಲ್ಲು ಸುರಿಸಿ ತೆವಳಿದ 

ಅಳ್ಳೆ ಗುಳ್ಳೆ ಬಸವ

ಸಾರಥಿಯ ಪದವಿ ಪಡೆದು

ಕಸ್ತೂರಿಗೆ ನೊಗವ ಕಟ್ಟಿ

ಊರೆಲ್ಲ ಸುತ್ತಿ ಮರಳುವ ಮುನ್ನ 

ಕತ್ತಲೆಯಲ್ಲಿ ಕಾಗೆಗೆ 

ಕೂಳು ಹಾಕಲಾಗಿತ್ತು.

Friday, 9 July 2010

ಕೆಡವಿ ತಾರತಮ್ಯವ

ಜಾತಿ ಮತದ

ವಿಷ ಬೀಜ

ಆಂತರ್ಯಕ್ಕೆ ಬಿತ್ತಿ

ರಾಜ್ಯ ಕಟ್ಟಿ

ಅರಸನಾಗಿ ಆಳಿದವನು

ಕೋಮು ಗಲಭೆಯ

ಕಳೆಯೊಳಗೆ ಸಿಲುಕಿ

ಕಾಲವಾದಾಗ

ಊರೂರ ಹಸಿರು ಸಿರಿಯಾಡುವುದು.

Saturday, 26 June 2010

ಬಿಚ್ಚೋಲೆ

ಗಂಜಲದಲಿ ಮನೆಯ 

ತೊಳೆದು  

ಬಾಗಿಲಂಗಳದಲಿ  

ಸಗಣಿ ಎರಚಿ  

ದೇವರ ಕೋಣೆಯಲಿ 

ಬೆಣವಣ್ಣನಿಟ್ಟು  

ಪೂಜಿಸಿದವಳು, 

ಕೊಟ್ಟಿಗೆಯ ಸ್ವಚ್ಚಗೊಳಿಸಿ  

ಬೆರಣಿಗೆ ಬೆಂಕಿಯಿಟ್ಟು ಬೆಚ್ಚಗಾದಳು

Saturday, 19 June 2010

ಮಣ್ಣೆಂಟೆಯೊಳು ತೆನೆ ಪೈರು

ಬಡತನದ ದೀವಿಗೆಯ ಹೊತ್ತು

ಕಾಮ ಕ್ರೋಧವನು ಕತ್ತಲೆಗೆ ದೂಡಿ

ಪೂಜೆ ಪುನಸ್ಕಾರವನು ಬದಿಗೊತ್ತಿ

ಬಿಸಿಲ ಧೂಳಲಿ ಕರೆ ಕಾಳ ಬಿತ್ತಲು

ಕುರಿಕೆಯ ಹಿಡಿದು ಹೊರಟ ಹಸಿ ಮೈ

ಜಡಿ ಮಳೆಗೆ ಬೆವರು ಸುರಿಸಿ,

ಮಣ್ಣೆಂಟೆ ಕಳೆಗಳನು ಬಡಿದು

ಬಡ ಬಗ್ಗರ ಬದುಕ ಕಟ್ಟಿ

ಮೊಳಕೆಯೊಡೆವ ಮೊದಲೆ

ತನ್ನಾಳುವ ಅರಸನ ಕೈಗೆ ಸಿಕ್ಕು

ಮೇಣಿಯ ಹಾಲನು ಕುಡಿದು

ನೇಗಿಲ ಯೋಗಿಯಾಗಿರುವೆ.

Friday, 11 June 2010

ಕಾಲವನ್ನು ಸರಿಸಿ

ಸುರುಟಿಕೊಂಡ ಪ್ರೀತಿ

ಕರಗಿದ ಮುತ್ತು

ಒಗ್ಗೂಡಿ

ಮರು ಹುಟ್ಟು.

ನೋವು ಹುದುಗಿಸಿಟ್ಟು

ಅವಳಿಗಾಗಿ ಕಾಯುವ ಕಾಲ

ನನ್ನ ಮುಂದೆ ನಶ್ವರ